ರಾಜ್ಯದ ಎಲ್ಲ ಪ್ರಮುಖ 400 ದೇಗುಲಗಳ ಪ್ರಸಾದ ಆಸಕ್ತ ಭಕ್ತರ ಮನೆ ಬಾಗಿಲಿಗೇ ತಲುಪಿಸುವ ಹೊಸ ಯೋಜನೆಯನ್ನು ಮುಜರಾಯಿ ಇಲಾಖೆ ಆರಂಭಿಸಿದೆ. ದೇವಸ್ಥಾನಕ್ಕೆ ತೆರಳಿ ಪ್ರಸಾದ ಪಡೆಯಲು ಕಷ್ಟವಾಗುವ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಮುಜರಾಯಿ ಇಲಾಖೆ ಇ-ಪ್ರಸಾದ (E-Prasad) ಸೇವೆ ಪ್ರಯೋಗ ನಡೆಸಿದೆ.
ರಾಜ್ಯದಲ್ಲಿನ ಗೃಹಪ್ರವೇಶ, ನಾಮಕರಣ ಸೇರಿದಂತೆ ಮದುವೆ ಸಮಾರಂಭಗಳು ಆರಂಭವಾಗಿದೆ. ಇಂತಹ ಶುಭ ಸಂದರ್ಭದಲ್ಲಿ ದೂರದ ಊರುಗಳಲ್ಲಿರುವ ದೇವಸ್ಥಾನಕ್ಕೆ ಹೋಗಿ ಪ್ರಸಾದ ತರುವುದು ಕಷ್ಟವಾಗುತ್ತದೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಮುಜರಾಯಿ ಇಲಾಖೆ ಮನೆ ಬಾಗಿಲಿಗೆ ದೇವರ ಪ್ರಸಾದ ತಲುಪಿಸಲಿದೆ.
ಈ ಮೂಲಕ ರಾಜ್ಯದ ಪ್ರಮುಖ 10 ದೇವಾಲಯಗಳ ಪ್ರಸಾದ ಆನ್ಲೈನ್ನಲ್ಲಿ ಮನೆ ಬಾಗಿಲಿಗೆ ತಲುಪಿಸುವ ಪ್ರಯೋಗ ಆರಂಭಿಸಿತ್ತು. ಈ ಇ-ಪ್ರಸಾದ ಸೇವೆಗೆ ಭಕ್ತಾದಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಇದುವರೆಗೂ ಅಂದಾಜು 25 ಸಾವಿರ ಮಂದಿ ಇ-ಪ್ರಸಾದ ಸೇವೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಮುಂದಿನ 15 ದಿನಗಳಲ್ಲಿ ರಾಜ್ಯದ 400 ದೇವಾಲಯಗಳಲ್ಲಿ ಇ-ಪ್ರಸಾದ ಸೇವೆ ಆರಂಭಿಸುವ ಯೋಜನೆಯನ್ನು ಮುಜರಾಯಿ ಇಲಾಖೆ ಹಾಕಿಕೊಂಡಿದೆ.
ವೃದ್ದರು ಮನೆಯಲ್ಲೇ ಕುಳಿತು ತಮಗಿಷ್ಟವಾದ ದೇವಸ್ಥಾನದ ಪ್ರಸಾದ ತರಿಸಿಕೊಳ್ಳಬಹುದು. ವಿಶೇಷಚೇತನರು, ಅಂಧರು ಸೇರಿದಂತೆ ಹಲವರಿಗೆ ಇ-ಪ್ರಸಾದ ಸೇವೆ ತುಂಬಾ ಉಪಯೋಗವಾಗಲಿದೆ.
ವಿಶೇಷ ದಿನಗಳಲ್ಲಿ ದೇವಸ್ಥಾನಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಪ್ರಸಾದ ಸ್ವೀಕರಿಸುವ ಕಷ್ಟನಿವಾರಿಸುವುದು ಪುಟ್ಟ ಮಕ್ಕಳಿರುವ ಪೋಷಕರು, ಮನೆಯಿಂದ ಹೊರಬರಲಾಗದ ಗರ್ಭಿಣಿಯರು ಈ ಸೇವೆಯ ಮೂಲಕ ಪ್ರಸಾದ ತರಿಸಿಕೊಳ್ಳಬಹುದು ಎಂದು ಮುಜರಾಯಿ ಇಲಾಖೆ ಹೇಳಿದೆ.